ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ

ಬಿಲ್ಲವ ಸಮಾಜದ ಹೊಸ ಮನ್ವಂತರಕ್ಕೆ ನಾಂದಿ

ಮಂಗಳೂರು : ಅಸ್ಪೃಶ್ಯತೆ ತುತ್ತ ತುದಿಯಲ್ಲಿದ್ದ ಆ ದಿನಗಳಲ್ಲಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಬಹುಸಂಖ್ಯಾತರೆನಿಸಿಕೊಂಡ ಬಿಲ್ಲವರು ಮೇಲ್ವರ್ಗವರು ಎಂದೆನಿಸಿಕೊಂಡವರಿಂದ ನೋವು ಅವಮಾನಗಳನ್ನು ಅನುಭವಿಸಿ ರೋಸಿ ಹೋಗಿದ್ದರು… ಆ ಸಮುದಾಯದವರಿಂದ ಮಾರುದ್ದ ದೂರ ನಿಲ್ಲಬೇಕಾದ ಹೀನಾಯ ಸ್ಥಿತಿ… ದೇವಾಲಯ, ವಿದ್ಯಾ ಮಂದಿರಗಳಲ್ಲಿ ಪ್ರವೇಶವಿಲ್ಲದೆ ಅನುಭವಿಸುತ್ತಿದ್ದ ನರಕಯಾತನೆ… ನೋವಿನಿಂದ ಜರ್ಜರಿತರಾದ ಸಮಾಜದ ಹಿರಿಯರು ಶ್ರೀಮಾನ್ ಸಾಹುಕಾರ್ ಕೊರಗಪ್ಪನವರ ನೇತೃತ್ವದಲ್ಲಿ, ಆದಾಗಲೇ ಕೇರಳದಲ್ಲಿ ಕ್ರಾಂತಿಕಾರಿ ಸಾಮಾಜಿಕ ಸುಧಾರಣೆಯ ಜ್ಯೋತಿ ಬೆಳಗಿಸಿದ ಶ್ರೀ ನಾರಾಯಣಗುರುಗಳನ್ನು ಕೇರಳದಲ್ಲಿ ಭೇಟಿ ಮಾಡಿದರು. ಧಾರ್ಮಿಕವಾಗಿ, ಸಾಮಾಜಿಕವಾಗಿ ಬಿಲ್ಲವರು ಅನುಭವಿಸುತ್ತಿರುವ ಸಂಕಟ, ನೋವು ಅಪಮಾನಗಳನ್ನು ಗುರುಗಳಿಗೆ ಮನವರಿಕೆ ಮಾಡಿ ತಮ್ಮ ಸಮಾಜವನ್ನು ಉದ್ಧರಿಸಬೇಕೆಂದು ಅನೇಕ ನಿವೇದನೆ ಮಾಡಿಕೊಂಡರು. ಮಂಗಳೂರಿಗೆ ಬಂದು ದೇವಾಲಯ ಪ್ರತಿಷ್ಠಾಪಿಸುವುದಾಗಿ ಶ್ರೀ ನಾರಾಯಣಗುರುಗಳು ನೀಡಿದ ಭರವಸೆಯೊಂದಿಗೆ ಅವರು ಹಿಂತಿರುಗಿದರು. ಬಿಲ್ಲವ ಸಮಾಜದ ಹಿರಿಯರಿಗೆ ನೀಡಿದ ಭರವಸೆಯಂತೆ ಶ್ರೀ ನಾರಾಯಣಗುರುಗಳು 1908ರಲ್ಲಿ ಪ್ರಪ್ರಥಮ ಬಾರಿಗೆ ಈ ತುಳುನಾಡಿನ ಪುಣ್ಯ ಭೂಮಿಗೆ ಪಾದಾರ್ಪಣೆ ಮಾಡಿದರು.

ಶಿವನ ಸಾನ್ನಿಧ್ಯವಿದ್ದ ಆ ಸ್ಥಳ ಮಂಗಳೂರಿನಾದ್ಯಂತ ಕ್ಷೇತ್ರ ಪ್ರತಿಷ್ಠಾಪನೆಗೆ ಸೂಕ್ತ ಸ್ಥಳಕ್ಕಾಗಿ ಹುಡುಕಾಡಿ ಪಾಳುಬಿದ್ದ ಪ್ರದೇಶವೊಂದರಲ್ಲಿ ಬಂದು ನಿಂತರು. ತಮ್ಮದಿವ್ಯ ದೃಷ್ಟಿಯಿಂದ ಅದೇ ಸ್ಥಳದಲ್ಲಿ ಶಿವನ ಸಾನ್ನಿಧ್ಯ ಇರುವುದು ಗುರುಗಳಿಗೆ ಗೋಚರವಾಯಿತು. ಕುದ್ರೋಳಿ ಎಂಬಲ್ಲಿನ ಈ ಸ್ಥಳವೇ ದೇವಾಲಯ ಸ್ಥಾಪನೆಗೆ ಯೋಗ್ಯ ಸ್ಥಳವೆಂದು ಬಿಲ್ಲವ ಮುಖಂಡರಿಗೆ ಮನವರಿಕೆ ಮಾಡಿ ಕೆಲಸ ಪ್ರಾರಂಭಿಸಲು ಹೇಳಿ, ತಾತ್ಕಾಲಿಕವಾದ ಗುಡಿಯೊಂದನ್ನು ನಿರ್ಮಿಸಿ, ಅಲ್ಲಿ ದೇವರ ಪೋಟೋವೊಂದನ್ನಿಟ್ಟು ಪ್ರಾರ್ಥನೆ ಮಾಡಲು ಹೇಳಿದರು. ಸಮಾಜ ಸಂಘಟನೆ, ಜಾಗೃತಿಗಾಗಿ “ಶಿವಭಕ್ತಿಯೋಗ ಸಂಘ”ವನ್ನು ಸ್ಥಾಪಿಸಿ “ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಶಕ್ತಿ ಪಡೆಯಿರಿ” ಎಂದು ಉಪದೇಶಿಸಿದರು.

Leave a Comment

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page

Scroll to Top