ಮಂಗಳೂರು ದಸರಾ ಅಂಗವಾಗಿ ಗೋಕರ್ಣನಾಥ ಕ್ಷೇತ್ರದಲ್ಲಿ ಅ.17ರಿಂದ 26ರವರೆಗೆ ಜರುಗುವ ವರ್ಚುವಲ್ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್. ಸಾಯಿರಾಮ್ ಚಾಲನೆ ನೀಡಿದರು. ಕ್ಷೇತ್ರಾಡಳಿತ ಮಂಡಳಿ ಕೋಶಾಧಿಕಾರಿ ಪದ್ಮರಾಜ್ ಆರ್, ಕಾರ್ಯದರ್ಶಿ ಮಾಧವ ಸುವರ್ಣ, ಸದಸ್ಯರಾದ ಎಂ.ಶೇಖರ ಪೂಜಾರಿ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ ವರ್ಚುವಲ್ ಮಾದರಿಯಲ್ಲಿ ಜಯ.ಸಿ.ಸುವರ್ಣ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದು, ಇವುಗಳ ನೇರ ವೀಕ್ಷಣೆಗೆ ಕೋವಿಡ್ ನಿಯಮಾವಳಿಗಳ ಪಾಲನೆಗೆ ಅವಕಾಶವಿರದ ಕಾರಣ ಕ್ಷೇತ್ರದ ಪ್ರಾಂಗಣದಲ್ಲಿ ಎಲ್ಇಡಿ ಪರದೆ ಮೂಲಕ ನೇರ ಪ್ರಸಾರ ಮಾಡಲಾಗಿದೆ.

ಶನಿವಾರ ಸಂಜೆ 6ರಿಂದ ಕದ್ರಿ ನೃತ್ಯ ವಿದ್ಯಾನಿಲಯ ವಿದ್ವಾನ್ ಯು.ಪಿ, ಶರಣ್ ಮತ್ತು ನಾಟ್ಯವಿದುಷಿ ನಿಶ್ಚಿತಾ ಶರಣ್ ಅವರಿಂದ ಸಂಗೀತ ನೃತ್ಯ ವೈಭವ ನೆರವೇರಿತು.
ಅ.18ರಂದು ಸಂಜೆ 5.30ರಿಂದ ತನುಶ್ರೀ ಪಿತ್ರೋಡಿ ಉಡುಪಿ ಅವರಿಂದ ಯೋಗ ನೃತ್ಯ ಭರತನಾಟ್ಯ, 6ರಿಂದ ಶ್ರೀಧರ ಪೂಜಾರಿ ಬೆಳ್ತಂಗಡಿ ಮತ್ತು ಬಳಗದವರಿಂದ ಸ್ಯಾಕೋಪೋನ್ ವಾದನ, ಸಾಯಂಕಾಲ 6.30ರಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾಕುಂಭ ಸಾಂಸ್ಕೃತಿಕ ವೇದಿಕೆ ಕುಳಾಯಿ ಇವರಿಂದ ಕಾರ್ಯಕ್ರಮ.
ಅ.19ರಂದು ಸಂಜೆ 6 ಬಿಲ್ಲವ ಸ್ವರ ಸಂಗಮ ಮಂಗಳೂರು ಇವರಿಂದ ಭಕ್ತಿಗೀತೆ, ಭಾವಗೀತೆ, ಜಾನಪದ ಗೀತೆ ಹಾಗೂ ದೇಶಭಕ್ತಿಗೀತೆ ಕಾರ್ಯಕ್ರಮ.
ಅ.20ರಂದು ಸಂಜೆ 6ರಿಂದ ನೃತ್ಯ ಲಹರಿ ನಾಟ್ಯಾಲಯದ ವಿದುಷಿ ರೇಷ್ಮಾ ನಿರ್ಮಲ್ ಭಟ್ ಮತ್ತು ಶಿಷ್ಯರಿಂದ ನೃತ್ಯ ಸಂಭ್ರಮ.
ಅ.21ರಂದು ಸಂಜೆ 6ರಿಂದ ಶ್ರಾವ್ಯಾ ಮತ್ತು ಪ್ರತೀಕ್ಷಾ ಇವರಿಂದ ಭರತನಾಟ್ಯ, ಸಾಯಂಕಾಲ 7ಕ್ಕೆ ಸಪ್ತಸ್ವರ ಆರ್ಕೇಸ್ಟ್ರಾದ ಪ್ರಭಾಕರ್ ತಣ್ಣೀರುಬಾವಿ ಮತ್ತು ಬಳಗದವರಿಂದ ಭಕ್ತಿ ರಸಮಂಜರಿ.
ಅ.22ರಿಂದ ಸಂಜೆ 6.30ಕ್ಕೆ ಯಕ್ಷಕೀರ್ತಿ ಬಳಗದವರಿಂದ ಕೋಟಿ ಚೆನ್ನಯ ತುಳು ಯಕ್ಷಗಾನ ತಾಳಮದ್ದಳೆ.
ಅ.23ರಂದು ಸನಾತನ ನಾಟ್ಯಾಲಯದ ವಿದುಷಿ ಶಾರದಾ ಮಣಿಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಪ್ರಸ್ತುತಿಯಲ್ಲಿ ಸನಾತನ ರಾಷ್ಟ್ರಾಂಜಲಿ…
ಅ.24ರಂದು ಸಾಯಂಕಾಲ 6ಕ್ಕೆ ವಿದ್ವಾನ್ ವೆಂಕಟಕೃಷ್ಣ ಭಟ್ ಮತ್ತು ಶಿಷ್ಯೆ ರಕ್ಷಾ ಎಸ್.ಎಚ್.ಪೂಜಾರಿ ಅವರಿಂದ ಭಕ್ತಿ ಗಾನಾರ್ಚನೆ…
ಅ.25ರಂದು ಸಾಯಂಕಾಲ 6ಕ್ಕೆ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಪುತ್ತೂರು ಬಳಗದವರಿಂದ ನೃತ್ಯ ಲಹರಿ ನಡೆಯಲಿದೆ ಎಂದು ಕ್ಷೇತ್ರಾಡಳಿತ ಮಂಡಳಿ ಕೋಶಾಧಿಕಾರಿ ಆರ್.ಪದ್ಮರಾಜ್ ತಿಳಿಸಿದರು.